Holi Hosanagara ,HOLI 2025,Holi Festival,Festival of Colors,Holi Celebration,Hosanagara,ಹೋಳಿ ಆಚರಣೆ,ಬಣ್ಣಗಳ ಹಬ್ಬ
Holi Hosanagara
ಹೊಸನಗರ : ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆರ್ ಎಸ್ ಎಸ್ ಸ್ವಯಂ ಸೇವಕರು ಏರ್ಪಡಿಸಿದ ಹೋಳಿ ಆಟದಲ್ಲಿ ಹಿರಿಯ ಸ್ವಯಂಸೇವಕರಿಂದ ಹಿಡಿದು ಕಿರಿಯ ಸ್ವಯಂ ಸೇವಕರು ಸೇರಿ ಹೋಳಿ ಆಟದಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚುವುದರ ಮುಖಾಂತರ ಹೋಳಿಯ ಶುಭಾಶಯವನ್ನು ಕೋರಿದರು ಬೆಳಗಿನ ಜಾವ 7:30ಕ್ಕೆ ಆರಂಭಗೊಂಡ ಈ ಬಣ್ಣದ ಆಟವು ಸರಿಸುಮಾರು 9:00 ಗಂಟೆಗೆ ಸಂಪನ್ನಗೊಂಡಿತ್ತು ಈ ಒಂದು ಹೋಳಿ ಆಚರಣೆಯಲ್ಲಿ ಪಟ್ಟಣದ ಮಾತೆಯರು, ಮಹಿಳೆಯರು ಮತ್ತು ಪುಟ್ಟ ಪುಟ್ಟ ಮಕ್ಕಳು ಕೂಡ ಪಾಲ್ಗೊಂಡು ಬಣ್ಣವನ್ನು ಎರಚಿ ಸಂಭ್ರಮಗೊಂಡರು ಹಾಗೂ ಸಂಭ್ರಮಕ್ಕೆ ಮತ್ತಷ್ಟು ಪುಷ್ಟಿ ನೀಡಿದವರು ಹೊಸನಗರದ ಅಗ್ನಿಶಾಮಕ ದಳದ ಸಿಬ್ಬಂದಿಗಳು.

ಜಲ ಫಿರಂಗಿಯ ನೃತ್ಯ ವೈಭವ :
ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಹೋಳಿ ಆಚರಣೆಯಲ್ಲಿ ಹೊಸನಗರ ದ ಅಗ್ನಿಶಾಮಕ ದಳದವರು ಪಾಲ್ಗೊಂಡು ಎಲ್ಲರಿಗೂ ಅಗ್ನಿಯಿಂದಾಗುವ ಅನಾಹುತಗಳನ್ನು ನಾವು ಹೇಗೆ ಸಂರಕ್ಷಿಸಬಹುದು ಎನ್ನುವುದರ ಪ್ರಾತ್ಯಕ್ಷಿಕೆಯನ್ನು ನೀಡಿ ನಂತರ ನೀರಿನ ಕಾರಂಜಿಯನ್ನು ಸೃಷ್ಟಿ ಮಾಡಿ ವಿಶೇಷವಾದ ನೀರಿನ ಆಕೃತಿಗಳನ್ನು ತೋರ್ಪಡಿಸಿದರು ಈ ಬಣ್ಣದ ನೀರಿನ ಕಾರಂಜಿಯಲ್ಲಿ ಎಲ್ಲರೂ ಮಿಂದೆದ್ದು ಸಂಭ್ರಮ ಗೊಂಡರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕೆ. ಎಸ್. ವಿನಾಯಕ್. ರಮೇಶ್ ಹಲಸಿನ ಕಟ್ಟೆ. ಬಿ.ಎಸ್. ಸುರೇಶ್. ನಂದಿ ಸಂತೋಷ್, ಮನು ಚಾಮುಂಡೇಶ್ವರಿ ಕಾಫಿ ವರ್ಕ್ಸ್, ದೀಪಕ್ ಸ್ವರೂಪ್, ಸಂತೋಷ್ ಕಾಮತ್, ಸುನಿಲ್, ದರ್ಶನ್. ಪೂಜಾರಿ, ಕಾರ್ತಿಕ್, ಪರಿಸರ ಪ್ರೇಮಿ ರಾಧಾಕೃಷ್ಣ, ನಾಗರಾಜ್. ಗಣೇಶ್, ಮನು, ಪ್ರತೀಕ್, ಸುದೀಪ್, ಹಾಗೂ ಜೆ ಸಿ ಐ ಕೊಡಚಾದ್ರಿಯ ಕಾರ್ಯಕರ್ತರು. ಮತ್ತು ಅಗ್ನಿಶಾಮಕ ದಳದ ಆನಂದಪ್ಪ ಮತ್ತು ಅವರ ತಂಡದವರು ಪಾಲ್ಗೊಂಡಿದ್ದರು.

ಪುರಾಣದಲ್ಲಿ ಹೋಳಿ
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ. ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ.

ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.

ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ. ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.
ಆಚರಣೆ
ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಉತ್ತರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಜನಪ್ರಿಯವಾಗಿದೆ.
ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ.
ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ.
Holi Hosanagara ,HOLI 2025,Holi Festival,Festival of Colors,Holi Celebration,Hosanagara,ಹೋಳಿ ಆಚರಣೆ,ಬಣ್ಣಗಳ ಹಬ್ಬ

